ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ, ಜಿಲ್ಲೆಗಳ ವ್ಯಾಪ್ತಿಯಲ್ಲಿ ಈ ಮೊದಲಿನಂತೆ ಎಲ್ಲ ಮಾರ್ಗಗಳನ್ನು ಪುನಃ ಪ್ರಾರಂಭಿಸಲಾಗಿದೆ. ಅದು ಅಲ್ಲದೇ ಹುಬ್ಬಳ್ಳಿ-ವಿಜಯಪುರ ಮಾರ್ಗದಲ್ಲಿ ಪ್ರಯಾಣಿಕರ ಬಹುದಿನದ ಬೇಡಿಕೆಯಂತೆ ಸೀಮಿತ ನಿಲುಗಡೆ ಕಲ್ಪಿಸುವದರೊಂದಿಗೆ 06 ಸರತಿಗಳ ಮಲ್ಟಿ ಏಕ್ಸಲ್ ವೋಲ್ವೊ ಸಾರಿಗೆ ಸೇವೆಯನ್ನು ಮತ್ತು ಧಾರವಾಡ ಗ್ರಾಮೀಣ ಘಟಕದಿಂದ ಧಾರವಾಡ -ಕರ್ನೂಲ್ ಎಸಿ-ಸ್ಲೀಪರ್ ಸಾರಿಗೆ ಸೇವೆಯನ್ನು ಹೊಸದಾಗಿ ಪ್ರಾರಂಭಿಸಲಾಗಿದೆ.
ಮಹಾರಾಷ್ಟ್ರ ರಾಜ್ಯದಲ್ಲಿ ಪೂರ್ಣ ಪ್ರಮಾಣದ ಸಾರಿಗೆ ಸೇವೆ ಪ್ರಾರಂಭ :- ಮಹಾರಾಷ್ಟ್ರ ರಾಜ್ಯದಲ್ಲಿ ಪ್ರಸ್ತುತ ಕೋವಿಡ್ ನಿರ್ಭಂಧಗಳನ್ನು ಸಡಿಲಗೊಳಿಸಲಾಗಿದೆ. ಆದ್ದರಿಂದ ಕಳೆದ ಒಂದು ವಾರದಿಂದ ಮಹಾರಾಷ್ಟ್ರ ರಾಜ್ಯದ ಮುಂಬಯಿ, ಪೂನಾ, ಶಿರಡಿ, ನಾಸಿಕ್, ಕೊಲ್ಲಾಪುರ, ಇಚಲಕರಂಜಿ, ಸಾಂಗ್ಲಿ, ಮೀರಜ್, ಸೊಲ್ಲಾಪುರ ಸೇರಿದಂತೆ ಪ್ರತಿಷ್ಠಿತ ಮತ್ತು ವೇಗದೂತ ಸಾರಿಗೆಗಳನ್ನು ಪುನಃ ಪ್ರಾರಂಭಿಸಲಾಗಿದೆ. ಆದ್ದರಿಂದ ಸಾರ್ವಜನಿಕ ಪ್ರಯಾಣಿಕರು ನಿರಾತಂಕವಾಗಿ ಪ್ರಯಾಣಿಸಬಹುದಾಗಿದೆ. ಮತ್ತು ದೂರದ ಮಾರ್ಗಗಳಲ್ಲಿ ಪ್ರತಿಷ್ಠಿತ ಮತ್ತು ವೇಗದೂತ ಸಾರಿಗೆಗಳಲ್ಲಿ KSRTC mobile app www.ksrtc.in ನ್ನು ಬಳಸುವದರ ಮೂಲಕ ಮುಂಗಡ ಟಿಕೇಟ್ ಬುಕಿಂಗ್ ಮಾಡಿಕೊಳ್ಳಬಹುದಾಗಿದೆ.
ಕೋವಿಡ್ ಪೂರ್ವದಲ್ಲಿ ಇರುವಂತೆ ಎಲ್ಲ ಸಾಮಾನ್ಯ, ವೇಗದೂತ ಮತ್ತು ಪ್ರತಿಷ್ಠಿತ ಸಾರಿಗೆಗಳನ್ನು ಪುನಃ ಪ್ರಾರಂಭಿಸಿರುವದರಿಂದ ಸಾರ್ವಜನಿಕ ಪ್ರಯಾಣಿಕರು ಈ ಸೌಲಭ್ಯದ ಸದುಪಯೋಗವನ್ನು ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.