ವೈಜ್ಞಾನಿಕ ರೀತಿಯಲ್ಲಿ ಕಾಯಿಗಳನ್ನು ಕಟಾವು ಮಾಡಿ ನೈಸರ್ಗಿಕವಾಗಿ ಮಾಗಿಸಿದ ಹಾಗೂ ಕ್ಯಾಲ್ಸಿಯಂ, ಕಾರ್ಬೈಡ್ ಮುಕ್ತ ಹಣ್ಣುಗಳನ್ನು ಯೋಗ್ಯ ದರದಲ್ಲಿ ನೆರವಾಗಿ ರೈತರಿಂದಲೇ ಗ್ರಾಹಕರಿಗೆ ದೊರಕಿಸಲು ಮಾವು ಪ್ರದರ್ಶನ ಮತ್ತು ಮಾರಾಟ ಮೇಳ (Mango Fair/Mango Mela) ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ (Nitesh Patil) ಹೇಳಿದರು.
ತೋಟಗಾರಿಕೆ ಇಲಾಖೆ (Horticulture department), ಜಿಲ್ಲಾ ಪಂಚಾಯಿತಿ (Zilla Panchayat) ಸಹಯೋಗದಲ್ಲಿ ನಗರದ ಕ್ಲಬ್ ರಸ್ತೆ ಹತ್ತಿರವಿರುವ ಹ್ಯೂಮ್ ಪಾರ್ಕ್ ನಲ್ಲಿ ಮೇ.26ರಿಂದ ಮೇ.29ರವರೆಗೆ 4ದಿನಗಳ ಕಾಲ ನಡೆಯುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ-2022 (Mango Fair/Mango Mela) ಉದ್ಘಾಟಿಸಿ ಅವರು ಮಾತನಾಡಿದರು.
ಮೇಳದಲ್ಲಿ ಹಲವು ಬಗೆಯ ಮಾವಿನ ಹಣ್ಣು (Mango) ಗಳು ಮಾರಾಟಕ್ಕಿವೆ. ಜಿಲ್ಲೆಯ ಎಲ್ಲ ಗ್ರಾಹಕರು ಯೋಗ್ಯ ದರದಲ್ಲಿ ಮಾವು ಖರೀದಿಸಿ ರುಚಿಕರ ಮಾವು ಸವಿಯಬಹುದು ಎಂದು ಹೇಳಿದರು. ಇದೇ ವೇಳೆ ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಂ ದ್ರವ ರೂಪದ ಗೊಬ್ಬರವನ್ನೂ ಲೋಕಾರ್ಪಣೆಗೊಳಿಸಿದರು.
ಮಾವು ಪ್ರದರ್ಶನ ಕೋಣೆ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವ್ಹಿ ಇಂಥ ಮೇಳಗಳು ರೈತರಲ್ಲಿ ಆತ್ಮ ವಿಶ್ವಾಸ ತುಂಬುತ್ತವೆ. ಬರೀ ಮಾವು ಪ್ರದರ್ಶನ ಅಷ್ಟೇ ಅಲ್ಲದೇ ಪ್ರತಿ ಎರಡು ತಿಂಗಳಿಗೊಮ್ಮೆ ರೈತರು ಬೆಳೆದ ವಿವಿಧ ತೋಟಗಾರಿಕಾ ಬೆಳೆಗಳ ಮೇಳವನ್ನೂ ಆಯೋಜಿಸಿ ರೈತರನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ತಿಳಿಸಿದರು.
- Advertisement -
ಮಾವಿನ ಮಳಿಗೆ ವೀಕ್ಷಿಸಿದ ಜಿಲ್ಲಾಧಿಕಾರಿ:
ಮೇಳವನ್ನು ಉದ್ಘಾಟಿಸಿ ಪ್ರತಿಯೊಂದು ಮಾವಿನ ಹೋಳಿಗೆಯನ್ನೂ ವೀಕ್ಷಿಸಿ ರೈತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ರೈತರನ್ನು ಹುರಿದುಂಬಿಸಿದರು. ಬೆಳಗಾವಿ, ಖಾನಾಪುರ, ಧಾರವಾಡ, ಕಿತ್ತೂರ ಸೇರಿದಂತೆ ವಿವಿಧ ತಾಲೂಕುಗಳಿಂದ ಮಾವು ಮಾರಾಟಕ್ಕೆ ಬಂದಿದ್ದ ರೈತರು ತಾವು ಬೆಳೆದ ಮಾವಿನ ಮಾವು ಬಗ್ಗೆ ಜಿಲ್ಲಾಧಿಕಾರಿಗೆ ವಿವರಿಸಿದರು. ಮೇಳದಲ್ಲಿ ಬರೀ ಕರ್ನಾಟಕ ಅಷ್ಟೇ ಅಲ್ಲದೇ ಮಹಾರಾಷ್ಟ್ರದಿಂದಲೂ ಬಂದಿದ್ದ ರೈತರು ಮಾವು ಮಾರಾಟ ಮಾಡಿದರು.
ಗಮನ ಸೆಳೆದ ತರಹೇವಾರಿ ಮಾವು:
ತೋತಾಪುರಿ, ಕೇಸರ, ಮಲಗೋವಾ, ದೂಧಪೇಡಾ, ಕೊಂಕಣ ರುಚಿ, ಆಪೂಸ್,ರಸಪೂರಿ, ದಸೇರಿ, ಬೆನೆಶಾನ, ಸಿಂಧುರಿ, ಮಲ್ಲಿಕಾ, ಕೊಬ್ರಿಕಾಯಿ, ಕರಿ ಇಶಾಡಿ, ಯಾಕೃತಿ ಸೇರಿದಂತೆ ನೂರಕ್ಕೂ ಹೆಚ್ಚು ತರಹೇವಾರಿ ತಳಿಯ ರುಚಿಕರ ಮಾವಿನ ಹಣ್ಣುಗಳು ಗ್ರಾಹಕರ ಬಾಯಲ್ಲಿ ನೀರೂರಿಸಿದವು. ಹತ್ತು ಹಲವು ಬಗೆಯ ಉಪ್ಪಿನಕಾಯಿ ಮಾವಿನಕಾಯಿಗಳೂ ಪ್ರದರ್ಶನದಲ್ಲಿ ಗ್ರಾಹಕರ ಗಮನ ಸೆಳೆದವು. ಮೇಳ ಉದ್ಘಾಟನೆ ಆಗುವ ಮೊದಲೇ ಆಗಮಿಸುವದಕ್ಕೆ ಶುರುವಿಟ್ಟುಕೊಂಡ ಗ್ರಾಹಕರು ಮಾವು ಖರೀದಿಯಲ್ಲಿ ನಿರತರಾಗಾದ್ದರು.
ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ಉಪನಿರ್ದೇಶಕರಾದ ಮಹಾಂತೇಶ ಮುರಗೋಡ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರಾದ ಸೋಮಶೇಖರ ಹುಳ್ಳೊಳ್ಳಿ ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.